ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ, ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ | ಜನತಾ ನ್ಯೂಸ್
ಬೆಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಯಾವ ಪಕ್ಷದ ಜತೆಯೂ ಜೆಡಿಎಸ್ ಮೈತ್ರಿ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತಾನಾಡಿದ ಅವರು, 2023 ರ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. ಅದಕ್ಕಾಗಿ ಈಗಾಗಲೇ ಪಕ್ಷದ ಮುಖಂಡರಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ.
ಎಲ್ಲಾ ಬಗೆಯ ತಯಾರಿ ಮಾಡಿಕೊಳ್ಳಲು ಮುಖಂಡರಿಗೆ ಸ್ವತಂತ್ರ ನೀಡಿದ್ದೇನೆ. ನಾವು ಕಾಂಗ್ರೆಸ್ - ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ಈಗ ಮೈತ್ರಿ ಮಾಡಿಕೊಂಡರೆ ಮುಂದೆ ತೊಂದರೆಯಾಗಬಹುದು ಎಂದರು.
ವಿಧಾನಪರಿಷತ್ ಚುನಾವಣೆ ಘೋಷಣೆ ಆದಾಗಿನಿಂದ ಜೆಡಿಎಸ್ ಬಗ್ಗೆ ಒಂದಲ್ಲ ಒಂದು ಊಹೆಯ ಸುದ್ದಿಗಳು ಹರಿದಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಪಕ್ಷದ ಬೆಂಬಲ ಕೇಳಿದ ಮೇಲೆ ಮತ್ತಷ್ಟು ಊಹಾಪೋಹಗಳಿಗೆ ದಾರಿ ಆಯಿತು. ಅದಕ್ಕೆಲ್ಲ ಇಂದು ತೆರೆ ಎಳೆಯಲಾಗುವುದು ಎಂದು ಹೇಳಿದರು.
ಮೊದಲು ನಮ್ಮ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ನಿಲ್ಲಿಸಲಿ ಎಂದರು.ನಮ್ಮ ಅಭ್ಯರ್ಥಿಯಿರುವ ಕ್ಷೇತ್ರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಾವು ಹೋರಾಟ ಮಾಡುತ್ತೇವೆ.
ನಮ್ಮ ಪಕ್ಷ ಸ್ಪರ್ಧಿಸುವ 6 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇರುತ್ತದೆ. ಈ ಆರೂ ಕ್ಷೇತ್ರಗಳಲ್ಲಿ ಯಾರ ಬೆಂಬಲ ಪಡೆದು ಹೋರಾಟ ಮಾಡುತ್ತಿಲ್ಲ. ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇವೆ.
ನಮಗೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಶತ್ರುಗಳೇ. ಎರಡೂ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತೇವೆ. 6 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಜೆಡಿಎಸ್ ಪಕ್ಷ ಸಂಘಟನೆಗೆ ಯಾವುದೇ ತೊಂದರೆ ಆಗದಂತೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. 2023 ರ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ. 2023ಕ್ಕೆ 123 ಸ್ಥಾನ ಗೆಲ್ಲಬೇಕು ಎನ್ನುವುದು ನಮ್ಮ ಗುರಿ ಎಂದು ಕುಮಾರಸ್ವಾಮಿ ಹೇಳಿದರು.